Sunday, February 08, 2009

ಅಜ್ಜಿ ಹೇಳಿದ ಕಥೆ

ನಾನು ಚಿಕ್ಕವನಿದ್ದಾಗ ನನ್ನ ದೊಡ್ಡಜ್ಜಿ ಸರಸ್ವತಿಬಾಯಿ ಹೇಳಿದ ಕಥೆಯೊಂದು ಇನ್ನೂ ನನಗೆ ಚೆನ್ನಾಗಿ ನೆನಪಿದೆ. ಈಗ ತನ್ನ ೮೦ರಲ್ಲಿರುವ ಈ ನನ್ನ ಅಜ್ಜಿ, ಮೂಲತಃ ಸೊಲ್ಲಾಪುರದ ಪ್ರತಿಷ್ಠಿತ ’ಸೋಮಶೆಟ್ಟಿ’ ಕುಟುಂಬದವಳು. ದಿನಪತ್ರಿಕೆಗಳನ್ನು ಓದುವುದಲ್ಲದೇ ಗಣಿತದ ಲೆಕ್ಕಗಳನ್ನು ಬಿಡಿಸಬಲ್ಲವಳಾದ ಅವಳನ್ನು ಕಂಡರೆ ನಮಗೆ ಒಂದು ಬಗೆಯ ಭಯ ಮತ್ತು ಕುತೂಹಲ. ಕನ್ನಡವನ್ನು ಚೆನ್ನಾಗಿ ಬಲ್ಲವಳಾಗಿದ್ದರೂ ಮೂಲತಃ ಮರಾಠಿ ಮಾತೃಭಾಷೆಯವಳಾದ ನನ್ನ ಈ ಅಜ್ಜಿಯು ಉಪಯೋಗಿಸುತ್ತಿದ್ದ ಕೆಲವು ಪದಗಳು, ಧ್ವನಿಯ ಏರಿಳಿತ, ಹಾವಭಾವ ಸ್ವಲ್ಪ ವಿಭಿನ್ನವಾಗಿದ್ದುದು ಕೂಡಲೆ ಗಮನಕ್ಕೆ ಬಂದು ಬಿಡುತ್ತದೆ. ಅವರು ಸಂಜೆಯ ಸಮಯದಲ್ಲಿ ಹೂ-ಬತ್ತಿ ಮಾಡುತ್ತ ಕಥೆಗಳನ್ನು ಹೇಳುತ್ತಿದ್ದರೆ, ನಾವೆಲ್ಲ ಮುಂದೆ ಕುಳಿತುಕೊಂಡು ’ಹ್ಞೂ’ಗುಟ್ಟುತ್ತಿದ್ದೆವು.

"ಬಹಳ ಹಿಂದಿನ ಮಾತು. ಹೈದರಾಬಾದನ್ನು ಆಗ ನಿಜಾಮನು ಆಳುತ್ತಿದ್ದನು. ತುಂಬ ಶ್ರೀಮಂತ ನಗರಿಯಾದ ಅಲ್ಲಿಗೆ ಯಾರೇ ಹೋದರೂ ಒಂದು ಉದ್ಯೋಗ ದೊರೆತು ಬಿಡುತ್ತದೆ... ನಗರದ ಮಧ್ಯದಲ್ಲಿ ಚಾರ್ ಮಿನಾರ್ ಎಂಬ ಕಟ್ಟಡವಿದೆ. ಅದರ ಸುತ್ತಲೂ ಮುತ್ತುಗಳನ್ನು ಪೇರಿಸಿಟ್ಟು ಮಾರುತ್ತಾರೆ. ಹಿಂದೆ ವಿಜಯನಗರದಲ್ಲಿ ಮುತ್ತು-ರತ್ನಗಳನ್ನು ತೆರೆದಂಗಡಿಗಳಲ್ಲಿ ಮಾರುತ್ತಿದ್ದರಲ್ಲ ಹಾಗೆ.

"ಒಂದು ರಾತ್ರಿ ಕಾವಲುಗಾರನು ಬೆಲೆಬಾಳುವ ಆಭರಣಗಳಿಂದ ಅಲಂಕೃತಳಾದ ಸ್ತ್ರೀಯೊಬ್ಬಳನ್ನು ಕಂಡನು. "ಏ, ನೀನಾರು ? ಇಂತಹ ಹೊತ್ತಿನಲ್ಲಿ ಒಬ್ಬಳೇ ಏನು ಮಾಡುತ್ತಿರುವೆ?" ಎಂದು ಅವಳನ್ನು ಪ್ರಶ್ನಿಸಿದನು. ಆಗ ಅವಳು "ಭಕ್ತನೇ, ನಾನು ನಿನ್ನ ಮನೆದೇವರು ಲಕ್ಷ್ಮೀದೇವಿ. ಈ ರಾಜ್ಯದಲ್ಲಿ ಅನ್ಯಾಯವು ಬಹಳವಾಗಿ ಹೆಚ್ಚಿರುವದರಿಂದ ಇಲ್ಲಿಂದ ನಾನು ಹೊರಟಿದ್ದೇನೆ." ಎಂದು ಉತ್ತರಿಸಿದಳು. ಭಯ-ಭಕ್ತಿಗಳಿಂದ ಕೈಮುಗಿದು ಕಾವಲುಗಾರನು "ಅಮ್ಮಾ, ನಾನೀಗ ಇಲ್ಲಿ ಕರ್ತವ್ಯನಿರತನಾಗಿದ್ದೇನೆ. ಇಂತಹ ಸಮಯದಲ್ಲಿ ನೀನು ಹೀಗೆ ಹೋದರೆ, ಇಲ್ಲಿಯ ಸಿರಿ-ಸಂಪತ್ತೆಲ್ಲ ಕುಂದಿ ಅಪವಾದ ನನ್ನ ಮೇಲೆ ಬರುತ್ತದೆ. ನಿನ್ನನ್ನು ಹೋಗಲು ಬಿಟ್ಟದ್ದಕ್ಕಾಗಿ ನಾನು ಶಿಕ್ಷೆಗೆ ಒಳಪಡಬೇಕಾಗುತ್ತದೆ. ನಾನು ಬೇಗನೆ ಅರಸನ ಬಳಿ ಹೋಗಿ ತಾವು ನಗರದಿಂದ ಹೊರಟಿರುವ ವಿಷಯವನ್ನು ತಿಳಿಸಿ ಬರುತ್ತೇನೆ. ನಂತರ ತಾವು ಸರಿತೋಚಿದ ಹಾಗೆ ಮಾಡಿ. ನಾನು ಹಿಂದಿರುಗುವವರೆಗೆ ತಾವು ಇಲ್ಲಿಯೇ ಕಾಯಬೇಕು" ಎಂದು ವಿನಂತಿಸಿಕೊಂಡನು. ದೇವಿಯು ಹಾಗೆಯೇ ಆಗಲೆಂದು ಮಾತು ಕೊಟ್ಟಳು.

"ಕಾವಲುಗಾರನು ಓಡಿಹೋಗಿ ಅರಸನಿಗೆ ಈ ವಿಷಯವನ್ನು ತಿಳಿಸಿದನು. ಆಗ ಅರಸನು ಸ್ವಲ್ಪಹೊತ್ತು ವಿಚಾರ ಮಾಡಿ, ಕೂಡಲೆ ಆ ಕಾವಲುಗಾರನ ಕತ್ತನ್ನು ಕತ್ತರಿಸಿಹಾಕಿ ಬಿಟ್ಟನು.

"ದೇವಿಯು ಅಂದಿನಿಂದ ಕಾವಲುಗಾರಿನಿಗಾಗಿ ಕಾಯುತ್ತಾ ಅಲ್ಲಿಯೇ ನೆಲೆಸಿರುವಳು. ಹೈದರಾಬಾದಿನ ವೈಭವ ಕುಂದದೇ ಉಳಿಯಿತು. ಭಕ್ತರು ದೇವಿಗಾಗಿ ಅಲ್ಲಿಯೇ ಒಂದು ದೇವಾಲಯವನ್ನು ನಿರ್ಮಿಸಿ ಪೂಜಿಸ ತೊಡಗಿದರು."

ಅಜ್ಜಿಯು ಕಥೆಯನ್ನು ಹೇಳಿ ಮುಗಿಸಿದಾಗ ಅರಸನು ದೇವಿಯನ್ನು ಮೂರ್ಖಳನ್ನಾಗಿಸಿದಂತೆ ನನಗೆ ಅನ್ನಿಸ ತೊಡಗಿತು. "ರಾಜನು ಕಾವಲುಗಾರನನ್ನು ಕೊಲ್ಲುವುದು ಅವಳಿಗೆ ಮೊದಲೇ ಗೊತ್ತಿರಲಿಲ್ಲವೇ? ತನ್ನ ಭಕ್ತನಿಗೆ ಕಾಣಿಸಿಕೊಂಡಾಕೆ, ಅವನನ್ನೇಕೆ ರಕ್ಷಿಸಲಿಲ್ಲ?" ಎಂಬ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಉಳಿದು ಬಿಟ್ಟವು.
* * *
ಈ ಘಟನೆಯಾದ ಸುಮಾರು ೬-೭ ವರ್ಷಗಳ ನಂತರ, ನಾನು ೯ನೇ ತರಗತಿಯಲ್ಲಿ ಶೈಕ್ಷಣಿಕ ಪ್ರವಾಸಕ್ಕಾಗಿ ಹೈದರಾಬಾದಿನ ಚಾರಮಿನಾರಿಗೆ ಹೋದಾಗ ಅದರ ಪಕ್ಕದಲ್ಲಿ ಹತ್ತಿಕೊಂಡೇ ದೇವಿಯ ದೇವಾಲಯ ನಿಜವಾಗಿಯೂ ಇರುವದನ್ನು ಕಂಡು ನನಗೆ ಆಶ್ಚರ್ಯವಾಯಿತು.
***
ಹೈದರಾಬಾದ ಸಂಸ್ಥಾನವು ಭಾರತ ಒಕ್ಕೂಟವನ್ನು ಸೇರಲು ಹಿಂದೇಟು ಹಾಕಿದ್ದು, ರಜಾಕಾರರ ಪುಂಡುಸೈನ್ಯ ಹೈದರಾಬಾದು-ಕರ್ನಾಟಕದ ಹಳ್ಳಿ-ಹಳ್ಳಿಗಳಲ್ಲಿ ನುಗ್ಗಿ ಜನರನ್ನು ದೋಚಿ, ಅವರ ಮೇಲೆ ಅತ್ಯಾಚಾರವೆಸಗಿ ಅವರ ಮನೆ ಆಸ್ತಿಗಳನ್ನು ಧ್ವಂಸಗೊಳಿಸಿ ಹತ್ಯೆಗೈದ ಸಂಗತಿಯನ್ನು ಕವಿ ಪಂಚಾಕ್ಷರಿ ಹಿರೇಮಠರಂತಹ ಪ್ರತ್ಯಕ್ಷದರ್ಶಿಗಳು ನನಗೆ ಮುಂದೆ ತಿಳಿಸಿದರು. ಸರ್ದಾರ ಪಟೇಲರು ಇಲ್ಲದೇ ಹೋಗಿದ್ದರೆ ಅಲ್ಲೊಂದು ಪಾಕಿಸ್ತಾನವು ಸೃಷ್ಟಿಯಾಗಿ ಹಿಂದುಗಳು ಅಲ್ಲಿ ಸರ್ವನಾಶವಾಗುತ್ತಿದ್ದರು ಎಂಬುದು ಅವರೆಲ್ಲರ ಖಚಿತ ಅಭಿಪ್ರಾಯವಾಗಿತ್ತು.
***
ಕೆಲವು ದಿನಗಳ ಹಿಂದೆ ಹೈದರಾಬಾದಿಗೆ ಹೋದಾಗ ಚಾರಮಿನಾರಗೆ ಮತ್ತೆ ಹೋಗುವ ಅವಕಾಶ ದೊರೆಯಿತು. "ಭಾಗ್ಯಲಕ್ಷ್ಮಿ ಮಂದಿರ" ಎಂಬ ಬೋರ್ಡನ್ನು ಓದಿದಾಗ ಹೈದರಾಬಾದಿಗೆ ಹಿಂದೆ ಭಾಗ್ಯನಗರಿ ಎಂಬ ಹೆಸರಿದ್ದುದು ನೆನಪಾಯಿತು. ಹಾಗಿದ್ದರೆ ಇದು ಮೊದಲಿನಿಂದಲೂ ಇದ್ದ ಗ್ರಾಮದೇವತೆಯದೇ ? ಮೂಲ ದೇವಸ್ಥಾನವನ್ನು ನಾಶಪಡಿಸಿ ಚಾರಮಿನಾರನ್ನು ಕಟ್ಟಿಸಿದರೇ? ಎಂದಿಗೂ ನಾಶವಾಗದ ತಮ್ಮ ಶ್ರದ್ಧೆಯ ಪ್ರತೀಕವಾಗಿ ಭಕ್ತರು ಈ ದೇವಾಲಯವನ್ನು ಚಿಕ್ಕದಾಗಿ ನಿರ್ಮಿಸಿಕೊಂಡಿರುವರೇ? ಎಂದೆಲ್ಲ ಅನಿಸಿತು. ಇತಿಹಾಸಕಾರರಿಗೆ ಗೊತ್ತಿರಬಹುದು...

ಕಥೆಕಟ್ಟುವ ಮೂಲಕ ಐತಿಹಾಸಿಕ ಸಂಗತಿಗಳನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡುವ "myth makers" ಅಲ್ಲವೇ ನಮ್ಮ ಪೂರ್ವಜರು? ಕಥೆಗಾರನ ದೇವಿಯು ಅರಸನ ಅನ್ಯಾಯವೆಂದು ಹೇಳಿದುದು ಹಿಂದುಗಳ ಮೇಲೆ ನಡೆದ ನಡೆದ ದೌರ್ಜನ್ಯಗಳ ಸೂಚನೆಯೆ? ದೇವಿಯು ಇಲ್ಲಿಯೇ ಕಾಯುತ್ತಿರುವಳು - ನಿಮ್ಮ ಅರಸನ ಸಮಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವನ ಬುದ್ಧಿವಂತಿಕೆಯಿಂದ ಹೈದರಾಬಾದಿನ ವೈಭವ ಉಳಿಯಿತು - ಎಂದು ಸುತ್ತಮುತ್ತಲಿನ ಬಹುಸಂಖ್ಯಾತ ಮುಸ್ಲಿಂ ವ್ಯಾಪಾರಿಗಳನ್ನು ಮತ್ತು ಅಧಿಕಾರಿಗಳನ್ನು ನಂಬಿಸಿ ತಮ್ಮ ಶ್ರದ್ಧಾಕೇಂದ್ರವಾದ ದೇವಸ್ಥಾನವನ್ನು ಪುನರ್ನಿರ್ಮಿಸಿಕೊಂಡರೇ. ಮೂರ್ಖಳಾದುದು ದೇವಿಯೇ ಅಥವಾ ಅಧಿಕಾರಿಗಳೇ? ಪುರಾಣಗಳ ಕಥೆಗಳಿಂದ ಐತಿಹಾಸಿಕ ಸತ್ಯಗಳನ್ನು ಹೊರೆತೆಗೆಯುವ ಸಾಮರ್ಥ್ಯ ನನಗಿಲ್ಲವಾದರೂ - ಕಥೆಗಾರನ ಕಲ್ಪನಾಶಕ್ತಿ ಅದ್ಭುತವೆಂದು ನಿಮಗೆ ಅನ್ನಿಸದೇ?

Labels: , , , , , ,